ಪ್ರೀತಿಯೆಂದ ಮೇಲೆ ಒಂದಿಷ್ಟು ಮುನಿಸೂ ಇರಲೇಬೇಕಾ ಗೆಳತೀ... ಇಲ್ಲವಾದರೆ ಅದೇಕೆ ನಾನು ನಿನ್ನಲ್ಲಿ ಮುನಿಸು ಮಾಡುತ್ತೇನೆ, ಅದೂ ನಿನ್ನೊಡನೆ ಇನ್ನೆಂದೂ ಮುನಿಸು ಮಾಡಲಾರೆ ಎಂದು ಹೇಳಹೇಳುತ್ತಲೇ...
ಈ ಪೀಠಿಕೆ ಹಾಕಲು ಕಾರಣವಿದೆ...
ಅದೇಕೋ ಇಂದು ಸಂಜೆ ನಿನ್ನೊಡನೆ ಮಾತನಾಡುವಾಗ ಯಾವುದೋ ವಿಷಯದ ಕುರಿತು ಸ್ವಲ್ಪ ಅಭಿಪ್ರಾಯ ಭೇದ ತಲೆದೋರಿತು. (ಅದು ಮುನಿಸಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇನೆ.) ಆ ಭೇದ ಕೂಡ ಸ್ವಲ್ಪೇ ಹೊತ್ತಿನಲ್ಲಿ ಕರಗಿ ಹೋಯಿತು ಕೂಡ. (ಇಂದಿನ ಅಭಿಪ್ರಾಯ ಭೇದಕ್ಕೆ ನಾನೇ ಹೊಣೆ ಕಣೆ. ಅದೇನೋ ಸ್ವಲ್ಪ ಜೆಲಸಿ ಮೂಡಿತು ಅನ್ಸುತ್ತೆ. ನಾನೇನು ಮಾಡಲಿ ಹೇಳು, ಅಸೂಯೆಯಂತಹ ಸಂಕುಚಿತ ಮನಸ್ಸನ್ನು ಕಳಚಿಕೊಂಡು ವಿಶಾಲ ಹೃದಯಿಯಾಗಿದ್ದೇನೆ ಎಂದೆಲ್ಲ ನನ್ನ ಬಗ್ಗೆಯೆ ಹೆಮ್ಮೆ ಪಟ್ಟುಕೊಂಡಿದ್ದೆ. ಆದರೆ ನಿನ್ನ ಕುರಿತಾದ ಬೇರಾರದೋ ಮೆಚ್ಚಿಕೆಯ ಮಾತು ಅಥವಾ ಬೇರಾರದೋ ಕುರಿತಾದ ನಿನ್ನ ಮೆಚ್ಚಿಕೆಯ ಮಾತು ನನ್ನಲ್ಲಿ ಅಚಾನಕ್ ಆಗಿ ಅಸೂಯೆ ಹುಟ್ಟಿಸಿಯೇ ಬಿಡುತ್ತದೆ. ಅದು ಸಹಜಪ್ರಕ್ರಿಯೆ. ಹಾಗಾಗಿ ಈಗ ಒಂದು ತೀರ್ಮಾನಕ್ಕೆ ಬಂದಿದ್ದೇನೆ, ನಿನಗೆ ಸಂಬಂಸಿ ನಾನು ಅಂತಹ ಅಸೂಯೆ ಮಾಡಿಕೊಳ್ಳದಿದ್ದರೆ ನಾನು ಮನದಾಳದಿಂದ ನಿನ್ನ ಪ್ರೀತಿಸುವುದೇ ಸುಳ್ಳು ಎಂದು ಭಾವಿಸಿಕೊಂಡು ಈಗ ಆ ಅಸೂಯೆಯನ್ನು ಮನಃಪೂರ್ವಕ ಒಪ್ಪಿಕೊಳ್ಳುತ್ತಿದ್ದೇನೆ, ಇತೀ ಶರಣಂ! ಈಗ ನನ್ನ ಪ್ರಕಾರ ಎಲ್ಲಿ ಪ್ರೀತಿಯಿರುತ್ತದೋ ಅಲ್ಲಿ ಅಸೂಯೆ ಇರಲೇಬೇಕು ಎಂಬುದು, ೨ಕೂಡಿಸು ೨ ಅಂದರೆ ನಾಲ್ಕು ಎಂಬಂತಹ ಸಹಜ ಲೆಕ್ಕಚಾರ. ಏನಂತೀ..)
ಈ ಪೀಠಿಕೆ ಹಾಕುತ್ತಲೇ ನಿನ್ನೊಡನೆ ಮೂಡಿದ ಕೆಲವು ಮುನಿಸಿನ ಕ್ಷಣಗಳು ನೆನಪಾಗತೊಡಗಿದವು... ಅದೃಷ್ಟ ನೋಡು , ನಾವು ನಿಜವಾದ ಅರ್ಥದಲ್ಲಿ ಮುನಿಸಿಕೊಳ್ಳಲೇ ಇಲ್ಲ. ಮುನಿಸಿಕೊಂಡರೂ ನಮ್ಮ ಮುನಿಸು ಸಂಬಂಧ ಕೆಡಿಸುವಷ್ಟು ದೂರ ಸಾಗಲೇ ಇಲ್ಲ. ಕೆಲವೇ ನಿಮಿಷಗಳಲ್ಲಿ , ಹೆಚ್ಚೆಂದರೆ ಕೆಲವೇ ಗಂಟೆಗಳಲ್ಲಿ ಮುಗಿದು ಹೋಯಿತು ನಮ್ಮ ಕೋಪತಾಪಗಳು.
ಅಂದ ಹಾಗೆ ನೀನು ಒಂದು ವಿಷಯ ಗಮನಿಸಿದ್ದಿಯಾ ಗೆಳತೀ, ನಿನ್ನೊಡನೆ ನನ್ನ ಮುನಿಸುಗಳೆಲ್ಲವೂ ಮುಖತಃ ಇರುವಾಗ ಘಟಿಸಿದ್ದಲ್ಲ. (ಮುಖತಃವೂ ಜಗಳವಾದರೆ ಯಾರಾದರೊಬ್ಬರಲ್ಲಿ ಅಥವಾ ಇಬ್ಬರಲ್ಲೂ ಸಮಸ್ಯೆಯಿದೆಯೆಂದೇ ಅರ್ಥ. ನೋಡಿದ್ಯಾ ನಮ್ಮಲ್ಲಿ ಅಂಥದು ಇಲ್ಲವೇ ಇಲ್ಲ.) ನಿನ್ನ ನೋಡಿದೊಡನೆ, ನಿನ್ನ ಸಮ್ಮುಖದಲ್ಲಿ ನನ್ನ ಮುನಿಸೆಲ್ಲವೂ ಬಾಯಲ್ಲಿಟ್ಟ ಐಸ್ಕ್ರೀಂನಂತೆ ಕರಗಿ ಹೋಗುವುದು ಸುಳ್ಳಲ್ಲ. ನಾನು ನಿನ್ನೊಡನೆ ರೇಗಿದ್ದೆಲ್ಲವೂ ಫೋನಿನಲ್ಲಿ ಮಾತ್ರ. ಅದರಲ್ಲೂ ಮುಖ್ಯವಾಗಿ ನಿನ್ನ ಎಸ್ಎಂಎಸ್ಗಳನ್ನೆಲ್ಲ ತಪ್ಪಾಗಿ ಅರ್ಥೈಸಿಕೊಂಡು ಅಥವಾ ಬಾರದಿರುವ ನಿನ್ನ ಸಂದೇಶಗಳಿಗೆಲ್ಲ ತಪ್ಪರ್ಥ ಮಾಡಿಕೊಂಡು. ಅದು ಕೋಪಕ್ಕಿಂತಲೂ ಹೆಚ್ಚಾಗಿ ಅಸಹನೆ ಎನ್ನಬಹುದು. (ಬಹುತೇಕ ಬಾರಿ ನನ್ನ ತಪ್ಪರ್ಥಗಳೇ ಕಾರಣವಾಗಿದ್ದರೂ ಕೆಲವು ಬಾರಿ ನಿನ್ನ ತಪ್ಪುಗಳೂ ಇರಲಿಲ್ಲವೆಂದಲ್ಲ. ಆದರೆ ಅದು ನಾನು ಗಂಭೀರವಾಗಿ ತೆಗೆದುಕೊಳ್ಳುವಂತಹುದಲ್ಲ ಆಯ್ತಾ ಮುದ್ದೂ....! ) ಹಾಗಿದ್ದರೂ ಬಹಳಷ್ಟು ಸಂದರ್ಭಗಳಲ್ಲಿ ನನ್ನ ಅಸಹನೆ ವ್ಯಕ್ತಪಡಿಸುತ್ತಿರಲಿಲ್ಲ. ಅದರಿಂದ ನಿನಗೆ ನೋವಾದರೆ ಎಂಬ ಕಾರಣಕ್ಕೆ. ಆದರೂ ಕೆಲವೊಮ್ಮೆ ನನ್ನ ಹದ್ದು ಮೀರಿ ಭಾವನೆಗಳು ಹೊರಗೆ ಉಕ್ಕಿ ಬಿಡುತ್ತಿದ್ದವು. ಬಳಿಕ ನೀನು ಕಣ್ಣೀರು ತುಂಬುತ್ತಿದ್ದಿ. ಅಲ್ಲಿಗೆ ಮುಗಿಯಿತು ನನ್ನ ಕತೆ. ಅತೀವವಾಗಿ ಮರುಗುತ್ತಿದ್ದೆ. ಕೊರಗುತ್ತಿದ್ದೆ. ರಾಜಿಗೆ ಹಂಬಲಿಸುತ್ತಿದ್ದೆ. ನೀನು ಮುಖತಃ ಸಿಕ್ಕ ಕ್ಷಣದಲ್ಲೇ ಮುಗಿಬಿದ್ದು ರಾಜಿಗೆ ಕೈ ಚಾಚುತ್ತಿದ್ದೆ. ನೀನೂ ಅಷ್ಟೇ! ಕಿಂಚಿತ್ತೂ ಬಿಗುಮಾನವಿಲ್ಲದೆ, ಎಳ್ಳಷ್ಟೂ ಬೇಸರವಿಟ್ಟುಕೊಳ್ಳದೆ ರಾಜಿಯ ಮುದ್ದು ನಗು ಚೆಲ್ಲುತ್ತಿದ್ದೆ.
ಅದೊಂದು ಘಟನೆ ನನಗಿನ್ನೂ ನೆನಪಿದೆ. ನಿನ್ನ ಬರ್ತ್ಡೇ ಸ್ವೀಟ್ನ್ನು ನನಗೆ ಕೊಟ್ಟೇ ಇರಲಿಲ್ಲ. ನಿಜ ಹೇಳಬೇಕೆಂದರೆ ಅದನ್ನು ನಾನು ವಾರಗಳ ಕಾಲ ಗಮನಿಸಿಯೂ ಇರಲಿಲ್ಲ. ಗೆಳತಿಯ ಸಂತೋಷವೇ ಮುಖ್ಯವಾದವನಿಗೆ ಅದೊಂದು ದೊಡ್ಡ ವಿಷಯವಾಗಿರಲೇ ಇಲ್ಲ. ಆದರೆ ಅದೊಂದು ದಿನ ಫೋನ್ನಲ್ಲಿ ಮಾತನಾಡುತ್ತಿದ್ದಂತೆ ಸಡನ್ನಾಗಿ ನೀನು ನನಗೆ ಸ್ವೀಟ್ ಕೊಟ್ಟಿಲ್ಲವೆಂದು ಹೊಳೆಯಿತು. ಅದಕ್ಕೆ ಕಾರಣ ನೀನು ಕ್ಲಾಸ್ಮೇಟ್ಗಳಿಗೆಲ್ಲ ಸ್ವೀಟ್ ಕೊಟ್ಟ ಬಗ್ಗೆ ಉಲ್ಲೇಖಿಸುತ್ತಿದ್ದುದು. ಅದೇಕೋ ಅಸಹನೆಯಾಗತೊಡಗಿತು. ಹಠಾತ್ತನೆ ಮನಸ್ಸಿನಲ್ಲಿ ಬೇಗುದಿ ಹೊತ್ತಿಕೊಂಡಿತು. ಅದನ್ನೆ ನಿನ್ನಲ್ಲಿ ತೋಡಿಕೊಂಡೆ. ಹಿಂದಿನ ವರುಷವೂ ನನಗೆ ಸ್ವೀಟ್ ಕೊಟ್ಟೇ ಇಲ್ಲವೆಂಬುದನ್ನು ನೆನಪಿಸಿದೆ...
ಮರುದಿನ ನೀನು ಸ್ವೀಟ್ ಹಿಡಿದುಕೊಂಡು ಬಂದೆ. ಹಿಂದಿನ ದಿನದ ಬೇಗುದಿ ಇನ್ನೂ ಪೂರ್ಣ ಆರಿರದ ನಾನಾದರೋ ನೀನು ಕೊಡುವುದಿದ್ದರೆ ಅಂದೇ ಕೊಡಬೇಕಿತ್ತು. ಈಗ ಕೊಟ್ಟು ತಪ್ಪು ಮಾಡಿದೆ. ನಾನು ಇದನ್ನು ಕೇಳಿ ಪಡಕೊಂಡಂತೆ ಆಯಿತು ಎಂದು ನುಡಿದೆ.
ಆ ಕ್ಷಣವೇ ನಾನು ಮಾತನಾಡಿದ್ದು ತಪ್ಪಾಯಿತು ಎಂಬುದು ಅರಿವಾಯಿತು. ನಿನ್ನ ಮುಖ ಹಠಾತ್ತನೆ ಕಪ್ಪಿಟ್ಟಿತು. ಕಣ್ಣುಗಳು , ಆ ಸುಂದರ ಅಗಲ ಅಗಲ ಕಣ್ಣುಗಳು, ನನ್ನ ಮುದ್ದು ಮುದ್ದು ಕಣ್ಣುಗಳು , ಹನಿ ತುಂಬಿಕೊಳ್ಳತೊಡಗಿದವು.
..... ಮೈ ಗಾಡ್! ಇದೇನು ಮಾಡಿಬಿಟ್ಟೆ ನಾನು ?!
ತುಂಬಾ ತುಂಬಾ ಕೆಟ್ಟದೆನಿಸಿತು. ನನ್ನ ಮೇಲೆಯೆ ರೇಜಿಗೆಯಾಯಿತು. ಕೂಡಲೇ ಸ್ವೀಟ್ ಪಡಕೊಂಡೆ.
ಸ್ವಲ್ಪ ಹೊತ್ತಿನ ಬಳಿಕ ಫೋನಿನಲ್ಲಿ ಸಿಕ್ಕಿದೆ ನೀನು. ನನ್ನ ಕೃತ್ಯ ಸಮರ್ಥಿಸಿಕೊಳ್ಳುವಂತೆ ನಾನು ಹೇಳಿದ ಮೇಲಷ್ಟೇ ನೀನು ಸ್ವೀಟ್ ಕೊಡಬಾರದಿತ್ತು. ಅದರ ಬದಲು ಕೊಡದಿದ್ದರೂ ನಡೆಯುತ್ತಿತ್ತು. ನಾನು ಹೇಳಿದ ಮೇಲೆಯೆ ನಿನಗೆ ನೆನಪಾಯಿತು ಎಂಬುದು ಆಪ್ತತೆಯ ಸಂಕೇತವಲ್ಲ ಎಂದೆಲ್ಲ ನನ್ನ ಚಿಂತನೆಯ ಧಾಟಿ ಹರಿಸಲಾರಂಭಿಸಿದೆ.
ಮುಂದಿನ ಕ್ಷಣ ನಿನ್ನಿಂದ ಬಂದ ಒಂದೇ ಒಂದು ಸರಳ ಮಾತು ನನ್ನ ಸಿದ್ಧಾಂತದ ಬೊಗಳೆಯನ್ನೆಲ್ಲ ಸೋಲಿಸಿಬಿಟ್ಟಿತು. ನನಗೆ ಆ ರೀತಿಯಲ್ಲೆಲ್ಲ ಚಿಂತಿಸಿ ಗೊತ್ತಿಲ್ಲ. ಅಂತಹುದೆಲ್ಲ ಆಲೋಚನೆ ನನಗೆ ಹೊಳೆಯುವುದೇ ಇಲ್ಲ. ಅಂದು ಕೊಡದೆ ತಪ್ಪು ಮಾಡಿದೆ. ಅದನ್ನು ಈಗ ಕೊಡ್ತಿದ್ದೇನೆ ಎಂದಷ್ಟೇ ನೀನು ಹೇಳಿದ್ದು. ತಕ್ಷಣ ನಾನು ಮಾತು ನಿಲ್ಲಿಸಿದೆ. ಕ್ಷಮೆ ಕೇಳಿದೆ.
ನಿನಗೆ ಗೊತ್ತಿಲ್ಲ , ಆ ಒಂದು ಸರಳ ಮಾತಿನಿಂದ ನೀನು ಅದೆಷ್ಟು ಬದಲಾವಣೆಯನ್ನು ನನ್ನಲ್ಲಿ ತಂದಿದ್ದಿ ಎಂದು.
ಆ ಒಂದು ಮಾತನ್ನು ಈಗಲೂ ನೆನಪಿಟ್ಟುಕೊಂಡಿದ್ದೇನೆ. ನಿರ್ವ್ಯಾಜ ಪ್ರೀತಿಯ ಮುಂದೆ ಇಂತಹ ತರ್ಕ, ಚಿಂತನೆಗಳೆಲ್ಲ ಅದೆಷ್ಟು ಅರ್ಥಹೀನ ಎಂದು ಅಂದು ಅರ್ಥ ಮಾಡಿಕೊಂಡೆ .
ಆ ಬಳಿಕ ನಾನು ಪ್ರೀತಿಗೆ ಸಂಬಂಸಿ ತರ್ಕಗಳನ್ನೆಲ್ಲ ಸಾಧ್ಯವಾದಷ್ಟು ಬದಿಗೆ ಸರಿಸುತ್ತಿದ್ದೇನೆ. ತರ್ಕರಹಿತವಾಗಿ ಮುಗ್ಧವಾಗಿ ಪ್ರೀತಿಸುವುದೇ ಅದೆಷ್ಟು ನಿರ್ಮಲ ಎಂದು ಅರಿತುಕೊಂಡಿದ್ದೇನೆ. ಏಕಾಗಿ ಪ್ರೀತಿಸಿದೆ, ನಾನು ಹಾಗೇಕೆ ಮಾಡಿದೆ, ಹೀಗೇಕೆ ಮಾಡಬಾರದಿತ್ತು ಎಂದೆಲ್ಲ ಚಿಂತಿಸಿಕೊಂಡು, ಕೊರಗಿಕೊಂಡು ಸಂತೋಷ ಹಾಳು ಮಾಡಿಕೊಳ್ಳುವ ಬದಲಾಗಿ ಸಿಗುವ ಅಪರೂಪದ ಪ್ರೀತಿಯನ್ನು ಬೊಗಸೆ ತುಂಬಿ ತುಂಬಿ ಕುಡಿಯುವುದು ಹೇಗೆ ಎಂದು ನೋಡಬೇಕು ಅಲ್ವೇನೆ.
ಪ್ರತಿಯೊಂದನ್ನೂ ನನ್ನದೊಬ್ಬನದೇ ಆಯಾಮದಲ್ಲಿ ನೋಡುವುದು ತಪ್ಪು ಎಂಬುದು ಕೂಡ ನಾನು ನಿನ್ನಿಂದ ಕಲಿತುಕೊಂಡ ಸತ್ಯ. ಹಾಗಾಗಿಯೆ ನನಗೆ ಅಸಹನೆಗೊಳ್ಳುವ ಪ್ರಸಂಗ ಸಂಭವಿಸಿದಾಗಲೆಲ್ಲ ನಿನ್ನ ದೃಷ್ಟಿಕೋನದಿಂದಲೂ ಚಿಂತಿಸತೊಡಗುತ್ತೇನೆ.. ಆಗ ನೀನು ಅಸಹನೆ ಮೂಡಿಸುವ ಯಾವುದೇ ಕಾರ್ಯವೆಸಗಿದ್ದರೂ ಅದು ಅನಿವಾರ್ಯವಾಗಿತ್ತು ಎಂಬ ಸತ್ಯದ ಅರಿವಾಗುತ್ತದೆ.
ನಿಜ ಗೆಳತಿ, ನಿನ್ನ ನಿರ್ಮಲ, ಮುಗ್ಧ , ಅಮಾಯಕ ಪ್ರೀತಿ ನನಗೆ ಅದೆಷ್ಟು ಪಾಠ ಕಲಿಸಿದೆಯೆಂಬುದು ನಿನಗೆ ತಿಳಿದಿಲ್ಲ. ಹಲವು ತಪ್ಪುಗಳನ್ನು ನಾನು ಪುನರಾವರ್ತಿಸದಿರಲು ಅದು ನನಗೆ ನೆರವಾಗಿದೆ. ಹಲವು ತಪ್ಪು ಕಲ್ಪನೆಗಳು ಉದಿಸದಂತೆ ತಡೆದಿವೆ ಗೊತ್ತಾ...
ಹಾಗಾಗಿಯೆ ಇತ್ತೀಚಿನ ದಿನಗಳಲ್ಲಿ ನನ್ನ ನಿನ್ನ ನಡುವೆ ಮುನಿಸೇ ಮೂಡುತ್ತಿಲ್ಲ. ಹಿ.. ಹಿ.. ಹಿ..
ಹಾಗೆಂದು ನಾನು ನಿನ್ನಲ್ಲಿ ಈಗ ಮುನಿಸಿಕೊಳ್ಳುತ್ತಲೇ ಇಲ್ವೇ. ಹಾಗೇನೂ ಹೇಳೋಲ್ಲ. ಆಗೊಮ್ಮೆ ಈಗೊಮ್ಮೆ ಪುಟ್ಟ ನಸುಮುನಿಸು ಇದ್ದೇ ಇರುತ್ತದೆ ಅಲ್ವೆ ಗೆಳತಿ. ಆದರೆ ಊಟಕ್ಕೆ ನಂಜಿಕೊಳ್ಳಲು ಉಪ್ಪಿನಕಾಯಿ ಬೇಕಿರುವಂತೆ ಅದೂ ಬೇಕೇಬೇಕಲ್ಲವೆ. ಇನ್ನೂ ಚೆನ್ನಾಗಿ ಹೇಳುವುದಾದರೆ ಅದೆಲ್ಲ ಐಸ್ಕ್ರೀಂ ಮೇಲಿನ ಚೆರ್ರಿ ಹಣ್ಣಿನಂತೆ .
ಮುನಿಸಿನ ನಂತರದ ರಾಜಿ ನೀಡುವ ಖುಷಿ ಉಂಟಲ್ಲ , ಅದು ಇನ್ನೊಂದು ಬಗೆಯ ಸಿಹಿ. ಅದಕ್ಕೂ ವಿಶೇಷ ಸವಿತನ ಇದೆಯಾದರೂ, ಮುನಿಸಿನ ಕಹಿ ಕೂಡ ತೀವ್ರವೇ ಆಗಿರುವುದರಿಂದ ಆ ವಿಶೇಷ ಸವಿತನ ಕಳಕೊಳ್ಳಲು ನಾನು ಸಿದ್ಧನಾಗಿದ್ದೇನೆ. ಸೋ, ಇನ್ನೆಂದೂ ಬೇಡ ಮುನಿಸು.
ಮುನಿಸು ತರವೇ ಮುಗುದೇ ... ಎಂದು ಕವಿ ಬರೆದ.
ಹೌದು, ಮುನಿಸು ಬೇಡ ಗೆಳತೀ ನಮ್ಮೊಳಗೆ ಎಂದು ನಾನು ಕೋರುತ್ತಿದ್ದೇನೆ.